ಎನ್ಕೌಂಟರ್ : ಜೈಲರ್ ಕೊಲೆ ಆರೋಪಿಗಳಾದ 2 ಶಾರ್ಪ್ ಶೂಟರ್ ಗಳ ಸಾವು | Janata news
ಪ್ರಯಾಗರಾಜ್ : ಅನೇಕ ಪ್ರಕರಣಗಳಲ್ಲಿ ಬೇಕಾಗಿದ್ದ ಅಪರಾಧಿಗಳು ಹಾಗೂ ಮುಖ್ತಾರ್ ಅನ್ಸಾರಿ ಗ್ಯಾಂಗ್ನ 2 ಶಾರ್ಪ್ ಶೂಟರ್ಗಳನ್ನು ಪ್ರಯಾಗರಾಜ್ನ ಎನ್ಕೌಂಟರ್ನಲ್ಲಿ ಉತ್ತರ ಪ್ರದೇಶದ ಪೊಲೀಸರು ತಟಸ್ಥಗೊಳಿಸಿದ್ದಾರೆ. 2013ರಲ್ಲಿ ವಾರಣಾಸಿಯ ಉಪ-ಜೈಲರ್ ಅನಿಲ್ ತ್ಯಾಗಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟವರಾಗಿದ್ದರು.
ಕಳೆದ ರಾತ್ರಿ ಅರೈಲ್ನಲ್ಲಿ ಉತ್ತರ ಪ್ರದೇಶದ ವಿಶೇಷ ಟಾಸ್ಕ್ ಫೋರ್ಸ್(ಎಸ್ಟಿಎಫ್)ನೊಂದಿಗಿನ ಮುಖಾಮುಖಿಯಲ್ಲಿ ಇಬ್ಬರು ಅಪರಾಧಿಗಳನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ. ಮೃತರನ್ನು ಅವರನ್ನು ವಕಿಲ್ ಪಾಂಡೆ ಮತ್ತು ಅಮ್ಜಾದ್ ಎಂದು ಗುರುತಿಸಲಾಗಿದೆ. ಇಬ್ಬರೂ ಮುನ್ನಾ ಭಜರಂಗಿ ಗ್ಯಾಂಗ್ ಮತ್ತು ಕುಖ್ಯಾತ ಶಾರ್ಪ್ಶೂಟರ್ ಮುಖ್ತಾರ್ ಅನ್ಸಾರಿ ಗ್ಯಾಂಗ್ನ ಸದಸ್ಯರು ಎನ್ನಲಾಗಿದೆ.
2013ರಲ್ಲಿ ಮೃತ ಇವರಿಬ್ಬರೂ ರೌಡಿಶೀಟರ್ ಮುನ್ನಾ ಭಜರಂಗಿ ಮತ್ತು ಮುಖ್ತಾರ್ ಅನ್ಸಾರಿ ಆದೇಶದ ಮೇರೆಗೆ, ಆಗಿನ ಉಪ-ಜೈಲರ್ ಅನಿಲ್ ಕುಮಾರ್ ತ್ಯಾಗಿ, ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಅಪರಾಧ ತಡೆಗೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದ್ದು, ನಿರಂತರ ಎನ್ಕೌಂಟರ್ ಗಳನ್ನು ನಡೆಸುವ ಮೂಲಕ ಪೊಲೀಸರು ಅಪರಾಧ ತಡೆಗೆ ಮುಂದಾಗಿದ್ದಾರೆ. ಅಂತರ್ಜಾಲದಲ್ಲಿ ಪೋಲೀಸರ ನಡೆಯ ಕುರಿತು ಮಾನವಹಕ್ಕು ಹೋರಾಟಗಾರರು ಎಂದು ಗುರುತಿಸಿಕೊಂಡಿರುವ ಅನೇಕರು ಅನೇಕ ಬಾರಿಗೆ ಕಳವಳ ವ್ಯಕ್ತ ಪಡಿಸಿದ್ದರೂ, ಅಪರಾಧ ತಡೆಗೆ ಪೋಲೀಸರ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯವೆಂದು ಅನೇಕರು ಸಮರ್ಥಿಸಿಕೊಂಡಿದ್ದಾರೆ.